ಜನವರಿ 25ರಂದು ದಿವಾಣ ಭೀಮ ಭಟ್ಟರ ಜನ್ಮ ಶತಮಾನೋತ್ಸವ ಸಮಾರೋಪ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜನವರಿ 5 , 2015
|
ಜನವರಿ 5, 2015
|
ಜನವರಿ 25ರಂದು ದಿವಾಣ ಭೀಮ ಭಟ್ಟರ ಜನ್ಮ ಶತಮಾನೋತ್ಸವ ಸಮಾರೋಪ
ಮಂಗಳೂರು :
ತೆಂಕುತಿಟ್ಟು ಯಕ್ಷಗಾನ ಕ್ಷೇತ್ರ ಕಂಡ ಅಪ್ರತಿಮ ಹಿಮ್ಮೇಳ ವಾದಕ ದಿವಾಣ ಭೀಮ ಭಟ್ಟರ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭ ಜ. 25ರಂದು ಮಧ್ಯಾಹ್ನ ಎರಡು ಗಂಟೆಗೆ ಶಕ್ತಿನಗರದ ನಾಲ್ಯಪದವು ಶಾಲೆ ವಠಾರದಲ್ಲಿ ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿ ಗೌರವ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ದಿವಾಣರ ಜನ್ಮಶತಮಾನೋತ್ಸವ ಅಂಗವಾಗಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸಂಸ್ಮರಣ, ಸನ್ಮಾನ ಮತ್ತು ತಾಳಮದ್ದಳೆ ನಡೆಯಲಿದೆ. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತೀ ಅಗತ್ಯ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಸಚಿವರು ಹೇಳಿದರು.
ಸಮಿತಿ ಕಾರ್ಯದರ್ಶಿ ದಿವಾಣ ಗೋವಿಂದ ಭಟ್ ಮಾತ ನಾಡಿ, ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸಮಾರಂಭ ಉದ್ಘಾಟಿಸಲಿದ್ದು, ಯಕ್ಷ ಗಾನ ಸಾಹಿತಿ- ಕಲಾವಿದ ಹೊಸ್ತೋಟ ಮಂಜುನಾಥ ಭಾಗವತರಿಗೆ ಶತಮಾನೋತ್ಸವ ಪ್ರಶಸ್ತಿ ನೀಡಿ ಸನ್ಮನಿಸಲಾಗುವುದು. ಡಾ.ಎಂ. ಪ್ರಭಾಕರ ಜೋಷಿ ಸಂಸ್ಮರಣಾ ಭಾಷಣ ನೆರವೇರಿಸಲಿದ್ದು, ಕಲಾ ಪೋಷಕ ಡಾ.ಭಾಸ್ಕರಾನಂದ ಕುಮಾರ್ ಅವರನ್ನು ಗೌರವಿಸಲಾಗುವುದು ಎಂದರು.
ಮೇರು ಕಲಾವಿದ ದಿವಾಣ ಭೀಮ ಭಟ್ಟರ ಸಿದ್ಧಿ ಸಾಧನೆಗಳನ್ನು ಅನಾವರಣಗೊಳಿಸುವ ದಿವಾಣ ಸಂಪದ ಎಂಬ ಸಂಸ್ಮರಣ ಗ್ರಂಥವನ್ನು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹಾಗೂ ಹಿರಿಯ ಕಲಾ ಪೋಷಕ ಟಿ.ಶ್ಯಾಮ ಭಟ್ ಲೋಕಾರ್ಪಣೆ ಮಾಡಲಿರುವರು. ಇದೇ ವೇಳೆ ದಿವಾಣ ಭೀಮ ಭಟ್ಟರ ಹಿಮ್ಮೇಳ ವಾದನದ ಪೀಠಿಕೆ ವಾದನವನ್ನು ದೃಶ್ಯ ಮಾಧ್ಯಮ ಮೂಲಕ ತೋರಿಸಲಾಗುವುದು.
ಭೀಮ ಭಟ್ಟ ಯಕ್ಷಗಾನದ ಹಿಮ್ಮೇಳದ ಶಾಸ್ತ್ರೀಯ ಬದ್ಧ ಚೆಂಡೆ, ಮದ್ದಳೆ ವಾದನವನ್ನು ಸಿಡಿ ರೂಪದಲ್ಲಿ ತಯಾರಿಸಲಾಗಿದ್ದು, ಅದನ್ನು ಉಚಿತವಾಗಿ ನೀಡುವ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಮಿತಿ ಕಾರ್ಯದರ್ಶಿ ದಿವಾಣ ಗೋವಿಂದ ಭಟ್, ಅನನ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕೃಪೆ :
http://vijaykarnataka.com
|
|
|